ಈ ಹಿಂದೆ ಬಿಡುಗಡೆಯಾದ ಶಿವಾಜಿ ಸುರತ್ಕಲ್ ವೀಕ್ಷಕರಿಂದ ಅಪಾರ ಮೆಚ್ಚುಗೆ ಪಡೆದಿತ್ತು. ಈಗ ನಿರ್ದೇಶಕ ಆಕಾಶ್ ಶ್ರೀವತ್ಸ ವಿಭಿನ್ನ ನಿರೂಪಣೆಯ ಮೂಲಕ ಗಮನ ಸೆಳೆದಿದ್ದರು. ಈಗ ಅದರ ಸೀಕ್ವೇಲ್ ಮೂಲಕ ಮತ್ತೊಂದು ಮರ್ಡರ್ ಕೇಸನ್ನು ಹೊತ್ತು ತಂದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕನ್ನಡದ ಶೆರ್ಲಾಕ್ ಹೋಮ್ಸ್ ಎಂದೇ ಹೆಸರಾಗಿರುವ ಶಿವಾಜಿ ಸುರತ್ಕಲ್ ಈ ಸಲ ಮಾಯಾವಿಯ ಕೇಸ್ ಬಿಡಿಸಿದ್ದಾರೆ. ವಿಶೇಷ ಅಂದ್ರೆ ಶಿವಾಜಿ ಈ ಕೇಸಿನ ಮೂಲ ಕೆದಕುತ್ತಾ ಹೋದಂತೆ ತಾನೇ ಈ ಸೀರಿಯಲ್ ಕಿಲ್ಲರ್ ಗೆ ಬಲಿಪಶುವಾಗುವಂತಹ ಸಂದರ್ಭ ಎದುರಾಗುತ್ತದೆ. ಅದನ್ನೆಲ್ಲ ಭೇದಿಸಿ ಶಿವಾಜಿ ರಿಯಲ್ ಕೊಲೆ ಹಿಡಿಯುತ್ತಾನಾ? ಇಲ್ವಾ ಅನ್ನೋದೇ ಚಿತ್ರದ ಇಂಟರೆಸ್ಟಿಂಗ್ ಫ್ಯಾಕ್ಟರ್. ಇಡೀ ಚಿತ್ರವನ್ಬು ಫಸ್ಟ್ ಪಾರ್ಟ್ ಗಿಂತ ರೋಚಕವಾಗಿ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ. ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ ಗಳನ್ನು ಇಡೋ ಮೂಲಕ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡಿದ್ದಾರೆ.ಶಿವಾಜಿಗೆ ಆಕಸ್ಮಿಕವಾಗಿ ಸಿಗುವ ಮಗುವೊಂದು ಈ ಕಥೆಯ ಕೇಂದ್ರಬಿಂದು.
ಸದಾ ಪತ್ನಿಯ ನೆನಪಲ್ಲೇ ಇರುವ ಶಿವಾಜಿಗೆ ಆಗಾಗ ಆಕೆ ಸಲಹೆ ಸೂಚನೆಗಳನ್ನು ನೀಡುತ್ತಲೇ ಬಂದಿದ್ದಾಳೆ. ಈ ಸಮಯದಲ್ಲಿ ಶಿವಾಜಿಯ ನೆರವನ್ನು ಕೋರಿಬಂದ ಮಹಿಳೆಯೊಬ್ಬಳನ್ನು ಹಂತಕ ಆಕ್ಸಿಡೆಂಟ್ ನೆಪದಲ್ಲಿ ಕೊಲೆ ಮಾಡುತ್ತಾನೆ. ತನ್ನ ಮಗುವನ್ನು ಶಿವಾಜಿಯ ಕೈಗಿತ್ತ ಆ ಮಹಿಳೆ ಕೊನೆಯುಸಿರೆಳೆಯುತ್ತಾಳೆ. ಒಂಟಿಯಾಗಿದ್ದ ಶಿವಾಜಿಯ ಬಾಳಲ್ಲಿ ಆ ಮಗು ಒಂದು ಆಶಾಕಿರಣವಾಗಿ ಬರುತ್ತದೆ. ಶಿವಾಜಿಯ ಸುತ್ತ ಸುತ್ತಿಕೊಳ್ಳುವ ಆ ಜೇಡರ ಬಲೆಯಿಂದ ಕೊನೆಗೆ ಹೇಗೆ ಹೊರಬರುತ್ತಾನೆ ಅನ್ನುವುದೇ ಕುತೂಹಲ.
ಈ ಕಥೆಯ ವಿಲನ್ ರುದ್ರ. ಆ ರುದ್ರ ಯಾರು? ಆತನಿಗೇಕೆ ಶಿವಾಜಿಯ ಮೇಲೆ ದ್ವೇಷ ? ಸರಣಿ ಕೊಲೆಗಳ ಹಿಂದೆ ಆತನ ಕೈವಾಡ ಇದೆಯಾ ಈ ಎಲ್ಲ ಪ್ರಶ್ನೆಗಳಿಗೆ ಉತ್ತರವೇ ಆತ ಸರಣಿ ಹತ್ಯೆಗಳನ್ನು ಮಾಡುವುದು ಯಾಕೆ? ಆ ಹತ್ಯೆಗಳ ರಹಸ್ಯ ಭೇದಿಸಲು ಹೊರಟ ಶಿವಾಜಿ ಅದೇ ಸುಳಿಯಲ್ಲಿ ಯಾಕೆ ಸಿಲುಕಿಕೊಂಡಿರುತ್ತಾನೆ? ಇದಕ್ಕೆಲ್ಲ ಉತ್ತರ ಮಾಯಾವಿಯ ಕಥೆಯಲ್ಲಿದೆ. ಉಡುಪಿಯಲ್ಲಿ ಆ ಮಗು ಶಿವಾಜಿಯ ಕೈ ಸೇರಿದ ನಂತರ ಮಾಯಾವಿ ಆತನ ಹಿಂದೆ ಬೀಳ್ತಾನೆ. ಅಲ್ಲಿಂದ ಮುಂದೆ ಒಂದರ ಹಿಂದೊಂದರಂತೆ ಮೂರು ಕೊಲೆಗಳು ನಡೆಯುತ್ತವೆ. ಪ್ರತಿ ಕೊಲೆಯನ್ನು ಮಾಡುವಾಗ ಹಂತಕ ಸುಳಿವನ್ನು ನೀಡುತ್ತ ಶಿವಾಜಿಗೆ ಸವಾಲ್ ಹಾಕುತ್ತಾ ಹೋಗುತ್ತಾನೆ, ಒಮ್ಮೆ ಶಿವಾಜಿ ಕೊಲೆಗಾರನ ಸಮೀಪಕ್ಕೆ ಹೋಗುತ್ತಿದ್ದಂತೆ ಆತ ಚಾಣಾಕ್ಷತನದಿಂದ ತಪ್ಪಿಸಿಕೊಳ್ಳುತ್ತಾನೆ. ಆದರೆ ಈ ಕಳ್ಳ ಪೊಲೀಸ್ ಆಟದಲ್ಲಿ ಐದನೇ ಕೊಲೆ ನಡೆಯೋದಕ್ಕೂ ಮುನ್ನ ಶಿವಾಜಿ ಹಂತಕನ ಮುಂದೆ ನಿಂತಿರುತ್ತಾನೆ. ಕಥೆಯಲ್ಲಿ ಬರುವ ಎಲ್ಲ ಪಾತ್ರಗಳ ಮೇಲೂ ಅನುಮಾನ ಮೂಡುವ ಹಾಗೆ ನಿರ್ದೇಶಕ ಆಕಾಶ್ ಜಾಣ್ಮೆಯ ನೆರೇಶನ್ ಮೂಲಕ ವೀಕ್ಷಕರ ಮನ ಗೆದ್ದಿದ್ದಾರೆ. ಮಾಡಬೇಕು. ಶಿವಾಜಿಗೆ ತಾನೇ ಕೊಲೆಗಳು ಮಾಡಿದಂತೆ ಕನಸು ಬೀಳುವುದು, ಜೊತೆಗೆ ಶಿವಾಜಿಯೇ
ಕೊಲೆಗಾರನಿರಬಹುದು ಎಂಬ ಅನುಮಾನ ಪ್ರೇಕ್ಷಕರಲ್ಲಿ ಮೂಡುವಂತೆ ಸನ್ನಿವೇಶಗಳ ಮೂಲಕ ಹೇಳಿದ್ದಾರೆ.
ಇಲ್ಲಿ ತಂದೆ ಮಗಳ ಬಾಂಧವ್ಯ, ತಂದೆ ಮಗನ ಬಾಂಧವ್ಯ, ತಾಯಿ ಮಗಳ ಬಾಂಧವ್ಯ ಎಲ್ಲವೂ ಇದೆ. ಶಿವಾಜಿ ಸುರತ್ಕಲ್ ಪಾತ್ರದಲ್ಲಿ ರಮೇಶ್ ಅರವಿಂದ್ ಮತ್ತೊಮ್ಮೆ ಅದ್ಭುತ ಅಭಿನಯ ಪ್ರದರ್ಶಿಸಿದ್ದಾರೆ. ಒಬ್ಬ ತಂದೆಯಾಗಿ, ತನಿಖಾಧಿಕಾರಿಯಾಗಿ ಅವರದ್ದು ಪರಿಪೂರ್ಣ ಅಭಿನಯ. ಇನ್ನು ಶಿವಾಜಿ ತಂದೆ ವಿಜಯೇಂದ್ರ ಸುರತ್ಕಲ್ ಆಗಿ ಹಿರಿಯ ನಟ ನಾಸರ್ ಮಾಗಿದ ಅಭಿನಯ ನೀಡಿದ್ದಾರೆ. ಶಿವಾಜಿಯ ಹಿರಿಯ ಅಧಿಕಾರಿ ದೀಪಿಕಾ ಕಾಮತ್ ಪಾತ್ರದಲ್ಲಿ ಮೇಘನಾ ಗಾಂವಕರ್ , ಬಾಲನಟಿ ಆರಾಧ್ಯ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಬರವಣಿಗೆ ಬಹಳ ಚೆನ್ನಾಗಿದೆ. ಗುರುಪ್ರಸಾದ್ ಮತ್ತು ಮಧು ಅಂಬಟ್ ಅವರ ಛಾಯಾಗ್ರಹಣ ಚಿತ್ರಕ್ಕೆ ಪ್ಲಸ್ ಆಗಿದೆ. ಜ್ಯುಡಾ ಸ್ಯಾಂಡಿ ಅವರ ಸಂಗೀತ ಚಿತ್ರಕಥೆಗೆ ಪೂರಕವಾಗಿದೆ.